ರಂಗ ಪ್ರದರ್ಶನ ಕಾಣಲಿದೆ ವಿದ್ಯಾರ್ಥಿಯ ಯಕ್ಷ ಪ್ರಸಂಗ!
ಲೇಖಕರು : ಎಸ್.ಜಿ. ಕುರ್ಯ, ಉಡುಪಿ
ಸೋಮವಾರ, ನವ೦ಬರ್ 11 , 2013
|
ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ರಚಿಸಿದ ಯಕ್ಷಗಾನ ಪ್ರಸಂಗದ ಪ್ರದರ್ಶನ ನ. 12ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿ ಶಿವಕುಮಾರ್ ಬಿ.ಎ.(18) ಅಳಗೋಡು ಪುರಾಣ ಆಧರಿತ ಮಹೀಂದ್ರ ಮಹಭಿಷ ಯಕ್ಷಗಾನ ನೂತನ ಪ್ರಸಂಗ ರಚಿಸಿದ್ದು ಚಿಟ್ಟಾಣಿ ಮೇಳದಿಂದ ಪ್ರದರ್ಶನಗೊಳ್ಳಲಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಿಟ್ಟೂರು ಅಳಗೋಡಿನ ಅನಂತಮೂರ್ತಿ ಭಟ್, ಗೀತಾ ದಂಪತಿ ಪುತ್ರನಾದ ಶಿವಕುಮಾರ್ ಶೈಕ್ಷಣಿಕ ಬಿಡುವಿನ ವೇಳೆಯಲ್ಲಿ ಪೌರಾಣಿಕ ಕಥಾಭಾಗವನ್ನು ರಸಾತ್ಮಕವಾಗಿ ಬರೆದಿದ್ದಾರೆ. ಮನೆಯಲ್ಲಿ ಯಕ್ಷಗಾನ ಕಲಿಕೆಗೆ ನೀಡಿದ ಪ್ರೋತ್ಸಾಹವೇ ಪ್ರಸಂಗ ರಚನೆಗೆ ಪ್ರೇರಣೆ. 2012ರಲ್ಲಿ ಯುಗ್ಮ ತಾರೆ ಸಾಮಾಜಿಕ ಯಕ್ಷ ಕೃತಿಯನ್ನು ರಚಿಸಿದ್ದು ಸಾಗರದ ನಿಟ್ಟೂರಿನ ರಾಮೇಶ್ವರ ಯಕ್ಷಗಾನ ಮಂಡಳಿ(ಮಕ್ಕಳ ಮೇಳ) ಮೂಲಕ 10 ಪ್ರದರ್ಶನ ಕಂಡಿದೆ.
ಮಕ್ಕಳ ಮೇಳದ ಡಿ.ಎಸ್. ಸುಬ್ರಹ್ಮಣ್ಯ ಭಟ್ ನಿಟ್ಟೂರು ಇವರಿಂದ 10 ವರ್ಷದಿಂದ ಯಕ್ಷಗಾನ ಕಲಿಯುತ್ತಿರುವ ಶಿವ ಕುಮಾರ್ ಅವರು ಚಿಟ್ಟಾಣಿಯವರಿಂದ ಶಿಬಿರದ ಮೂಲಕ ಯಕ್ಷಗಾನ ಬಣ್ಣಗಾರಿಕೆ ಮತ್ತು ತಾಳದ ತರಬೇತಿ ಪಡೆದಿದ್ದಾರೆ. ಚಿಟ್ಟಾಣಿ ಜತೆಗೂ ರಂಗದಲ್ಲಿ ಹೆಜ್ಜೆ ಹಾಕಿದ್ದಾರೆ. ಶಿವಕುಮಾರ್ ರಚಿತ ಸ್ವಪ್ನ ಶೃಂಗಾರ(ಕಿರು ಕಾದಂಬರಿ), ಏಕಲವ್ಯ, ಮೇಘ ದುಂದುಭಿ(ನಾಟಕ), ತೆರೆಯ ಮರೆಯಲ್ಲಿ (ಕವನ ಸಂಕಲನ), ಸ್ನೇಹಲೋಕ(ಸಣ್ಣ ಕತೆಗಳು) ಕೃತಿಗಳು ಬಿಡುಗಡೆಯಾಗಿವೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಜಾಂಬವತಿ ಕಲ್ಯಾಣ ಪ್ರಸಂಗದ ಕೃಷ್ಣನ ಪಾತ್ರಕ್ಕೆ ದ್ವಿತೀಯ ಬಹುಮಾನ, ಬ್ಯಾಡ್ಮಿಂಟನ್ನಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿದೆ.
ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಯಕ್ಷ ಕಾವ್ಯ ಕೃಷಿಗೆ ಮಾರ್ಗದರ್ಶಕ. ಶ್ರೀಕೃಷ್ಣ ಮಠದ ಆಶ್ರಯ, ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆಯ ಸಹಕಾರದಲ್ಲಿ ನಡೆಯುವ ಯಕ್ಷ ಪ್ರದರ್ಶನದಲ್ಲಿ ಚಿಟ್ಟಾಣಿ(ಬ್ರಹ್ಮ), ಸುಬ್ರಹ್ಮಣ್ಯ ಚಿಟ್ಟಾಣಿ(ಮಹಭಿಷ) ಹಾಗೂ ಪ್ರಸಂಗಕರ್ತ ಶಿವ ಕುಮಾರ್ ಖಳನಾಯಕನ(ದುರ್ಜಯ) ಪಾತ್ರ ವಹಿಸುವರು.
* ಪುರಾಣದಲ್ಲಿರುವ ಶಂತನು ಮಹಾರಾಜನ ಪೂರ್ವಜನ್ಮದ ಕತೆಯನ್ನೊಳಗೊಂಡ ಪ್ರಸಂಗ ಪದ್ಯ ಸಹಿತವಾಗಿ ರಚಿಸಲು 2 ತಿಂಗಳು ಬೇಕಾಯಿತು. ಪಿಯುಸಿಯಲ್ಲಿ ಶೇ. 80 ಅಂಕ ಸಿಕ್ಕಿದ್ದು ಪದವಿ ಬಳಿಕ ಸ್ನಾತಕೋತ್ತರ ಪದವಿ ಪಡೆದು ಸಾಹಿತ್ಯದ ಅಧ್ಯಯನದೊಂದಿಗೆ ಕನ್ನಡ ಪ್ರಾಧ್ಯಾಪಕನಾಗುವ ಗುರಿಯಿದೆ. - ಶಿವಕುಮಾರ್ ಬಿ.ಎ. ಅಳಗೋಡು(ಮಹೀಂದ್ರ ಮಹಭಿಷ ಪ್ರಸಂಗಕರ್ತ)
ಕೃಪೆ : http://www.vijaykarnataka.com
|
|
|